ಕೋವಿಡ್ ಪರೀಕ್ಷೆ ಪಾಸಿಟಿವ್ ಆದರೆ ಬೆಂಗಳೂರಿಗರು ಏನು ಮಾಡಬಹುದು

ನೀವು ಕೋವಿಡ್ ಪಾಸಿಟಿವ್ ಆಗಿದ್ದರೆ ಅಥವಾ ನೀವು ರೋಗಲಕ್ಷಣಗಳನ್ನು ಹೊಂದಿದ್ದರೆ ಏನು ಮಾಡಬೇಕು? ನೀವು ಎಲ್ಲಿ ಚಿಕಿತ್ಸೆ ಪಡೆಯಬಹುದು? ಸಮಗ್ರ ಕೋವಿಡ್ ಬೆಂಗಳೂರು ಮಾರ್ಗದರ್ಶಿ ಇಲ್ಲಿದೆ.

Translated by Madhusudhan Rao

ಜೂನ್ 28 ರಿಂದ ಜುಲೈ 5 ರ ನಡುವಿನ ವಾರದಲ್ಲಿ, ಬೆಂಗಳೂರಿನ ಕೋವಿಡ್-19 ಎಣಿಕೆ 7240 ಹೊಸ ಪ್ರಕರಣಗಳೊಂದಿಗೆ ಮೂರು ಪಟ್ಟು ಹೆಚ್ಚಾಗಿದೆ. ಪ್ರಕರಣಗಳ ಪ್ರವಾಹ ನಗರದ ಆರೋಗ್ಯ ವ್ಯವಸ್ಥೆಯ ಮೇಲೆ ದೊಡ್ಡ ಹೊರೆಯಾಗಿದ್ದು, ಅಸ್ವಸ್ಥರು ಆಸ್ಪತ್ರೆಯ ಹಾಸಿಗೆಗಳನ್ನು ಅಥವಾ ಚಿಕಿತ್ಸೆಯನ್ನು ಸಮಯಕ್ಕೆ ಸರಿಯಾಗಿ ಪಡೆಯದಿರುವ ಬಗ್ಗೆ ಅನೇಕ ವರದಿಗಳು ಬಂದಿವೆ. ಆದ್ದರಿಂದ ಕೋವಿಡ್-ಪಾಸಿಟಿವ್ ಆದರೆ ಬೆಂಗಳೂರಿಗರು ಏನು ಮಾಡಬೇಕು ಎಂಬ ಬಗ್ಗೆ ಭಯ ಮತ್ತು ಗೊಂದಲ ಉಂಟಾಗಿದೆ.

“ಕೋವಿಡ್ ಗಿಂತ ಅದರ ಬಗ್ಗೆ ಭಯ-ಭೀತಿಯೇ ಹೆಚ್ಚು ಅಪಾಯಕಾರಿ. ಎಲ್ಲಕ್ಕಿಂತ ಮುಂಚೆ ನಾವು ಇದರ ಬಗ್ಗೆ ಗಮನ ಕೊಡಬೇಕು” ಎಂದು ಭಾರತೀಯ ಸಾರ್ವಜನಿಕ ಆರೋಗ್ಯ ಸಂಸ್ಥೆಯ (ಇಂಡಿಯನ್ ಇನ್ಸ್ಟಿಟ್ಯೂಟ್ ಆಫ್ ಪಬ್ಲಿಕ್ ಹೆಲ್ತ್) ಸಾಂಕ್ರಾಮಿಕ ರೋಗಶಾಸ್ತ್ರ ವಿಭಾಗದ ಮುಖ್ಯಸ್ಥರೂ, ಪ್ರಾಧ್ಯಾಪಕರೂ ಆದ ಡಾ.ಗಿರಿಧರ ಆರ್ ಬಾಬು ಹೇಳುತ್ತಾರೆ. ಡಾ.ಗಿರಿಧರ್ ಅವರು ರಾಜ್ಯ ಸರ್ಕಾರದ ಕೋವಿಡ್ ತಜ್ಞರ ಸಮಿತಿ ಮತ್ತು ಐಸಿಎಂಆರ್ ನ ಕೋವಿಡ್ ಕಾರ್ಯಪಡೆಗಳ ಸದಸ್ಯರಾಗಿದ್ದಾರೆ.

ಒಂದು ವೇಳೆ ನೀವು ಅಥವಾ ನಿಮ್ಮ ಕುಟುಂಬದ ಸದಸ್ಯರು ಕೋವಿಡ್ ಶಂಕಿತರಾಗಿದ್ದರೆ ಅಥವಾ ಪರೀಕ್ಷೆ ಪಾಸಿಟಿವ್ ಆದರೆ, ನೀವು ಏನು ಮಾಡಬೇಕು? ಈ ಕೈಪಿಡಿಯಲ್ಲಿ ನೀವು ಹೇಗೆ ಸಿದ್ಧರಾಗಬಹುದು, ಮತ್ತು ಯಾವ ಕ್ರಮಗಳನ್ನು ತೆಗೆದುಕೊಳ್ಳಬಹುದು ಎಂಬುದರ ಕುರಿತು ಮಾಹಿತಿ ಇದೆ.

1. ನಿವಾರಣೆ

“ನಾವು ಸೌಕರ್ಯಗಳನ್ನು ಹೆಚ್ಚಿಸುವಲ್ಲಿ ತಡ ಮಾಡಿದೆವು, ಆದರೆ ಈಗ ಬಹುತೇಕ ವಿಷಯಗಳು ಜಾರಿಯಲ್ಲಿದ್ದು, ಉಳಿದಿರುವುದು ಸಮುದಾಯದ ಸಹಕಾರ ಅಷ್ಟೇ. ನಾಗರಿಕರು ಮಾಡಬೇಕಾದ ಮೊದಲ ಕೆಲಸ ತಮ್ಮನ್ನು ತಾವು ರಕ್ಷಿಸಿಕೊಳ್ಳುವುದು – 3 ವಿಷಯಗಳನ್ನು ತಪ್ಪಿಸಿ, 3 ವಿಷಯಗಳನ್ನು ಪಾಲಿಸಿ” ಎಂದು ಡಾ.ಗಿರಿಧರ ಹೇಳುತ್ತಾರೆ.

ತಪ್ಪಿಸಬೇಕಾದವು:

  • ಕಡಿಮೆ ಗಾಳಿಬೆಳಕು ಇರುವ ಮುಚ್ಚಿದ ಸ್ಥಳಗಳು
  • ಜನಸಂದಣಿ (ಇಬ್ಬರಿಗಿಂತ ಹೆಚ್ಚು)
  • ನಿಕಟ ಸಂಪರ್ಕ

ಪಾಲಿಸಬೇಕಾದವು:

  • ಕನಿಷ್ಠ ಆರು ಅಡಿಗಳ ಸಾಮಾಜಿಕ ಅಂತರ
  • ಮಾಸ್ಕ್ ಧರಿಸಿ
  • ಕೈ ತೊಳೆಯಿರಿ

2. ರೋಗಲಕ್ಷಣಗಳು ಕಂಡುಬಂದರೆ ಏನು ಮಾಡಬೇಕು?

ಡಾ.ಗಿರಿಧರ ಪ್ರಕಾರ, ಹೆಚ್ಚಿನ ಸಂದರ್ಭಗಳಲ್ಲಿ ಅಸ್ವಸ್ಥರು  ಸಣ್ಣ/ ಸಾಧಾರಣ ರೋಗಲಕ್ಷಣಗಳನ್ನು ಮಾತ್ರ ಹೊಂದಿರುತ್ತಾರೆ ಅಥವಾ ಅವರಲ್ಲಿ ಯಾವುದೇ ಲಕ್ಷಣಗಳಿರುವುದಿಲ್ಲ.

ಸಾಮಾನ್ಯ ಆರಂಭಿಕ ಲಕ್ಷಣಗಳು:

  • ಕೆಮ್ಮು
  • ಜ್ವರ
  • ಉಸಿರಾಟದ ತೊಂದರೆ
  • ಗಂಟಲು ಕೆರತ
  • ಉಸಿರು ಕಟ್ಟುವುದು
  • ತಲೆನೋವು
  • ಮೈ ನೋವು
  • ರುಚಿ ಮತ್ತು ಘ್ರಾಣಶಕ್ತಿ ಹಠಾತ್ತನೆ ಕುಂದುವುದು –  ಸಾಮಾನ್ಯವಾಗಿ ಇದನ್ನು ಹೊಸ ಕೋವಿಡ್ ಅಸ್ವಸ್ಥರು ವರದಿ ಮಾಡುತ್ತಾರೆ.

ಅಲ್ಲದೆ, ಕೆಲವು ಅಸ್ವಸ್ಥರು ಲಕ್ಷಣರಹಿತವಾಗಿದ್ದು, ಇವುಗಳಲ್ಲಿ ಯಾವುದನ್ನೂ ಅನುಭವಿಸುವುದೇ ಇರಬಹುದು .

ಮನೆಯಲ್ಲೇ ಇರಿ: “ನೀವು ರೋಗಲಕ್ಷಣಗಳನ್ನು ಬೆಳೆಸಿಕೊಂಡರೆ, ಭಯಪಡಬೇಡಿ. ಗಮನವಿಡಬೇಕಾದ ವಿಷಯವೆಂದರೆ ಮನೆಯಲ್ಲಿಯೇ ಉಳಿದು, ಬೇರೆಯವರ ಸಂಪರ್ಕವಿಲ್ಲದೆ ಇರುವುದು” ಎಂದು ಡಾ.ಗಿರಿಧರ ಹೇಳುತ್ತಾರೆ.

ಜುಲೈ 4 ರಂದು, ರಾಜ್ಯ ಸರ್ಕಾರವು ಲಕ್ಷಣಗಳನ್ನು ತೋರಿಸದ ಅಥವಾ ತೀವ್ರವಲ್ಲದ ಅಸ್ವಸ್ಥರಿಗೆ  ಮನೆಯಲ್ಲಿಯೇ ಪ್ರತ್ಯೇಕತೆ (isolation) ಅನುಮತಿಸುವ ನೀತಿಯನ್ನು ಪ್ರಾರಂಭಿಸಿ, ಅವರಿಗೆ ಮನೆಯಲ್ಲಿಯೇ ಸೂಕ್ತ ಚಿಕಿತ್ಸೆ ನೀಡಬಹುದು ಎಂಬುದನ್ನು ಸೂಚಿಸಿದೆ. 

ಪಲ್ಸ್ ಆಕ್ಸಿಮೀಟರ್ ಅನ್ನು(ದೇಹದಲ್ಲಿಆಕ್ಸಿಜನ್ ಅಳಿಯುವ ಪುಟ್ಟ ಯಂತ್ರ) ಬಳಿ ಇಟ್ಟುಕೊಳ್ಳಿ: ರೋಗಲಕ್ಷಣಗಳ ತೀವ್ರತೆಯನ್ನು ನಿರ್ಧರಿಸುವಲ್ಲಿ ರಕ್ತದ ಆಕ್ಸಿಜನ್ ಶುದ್ಧತ್ವ ಮಟ್ಟಗಳು (ಎಸ್‌ಪಿಒ2) ಪ್ರಮುಖ ಪಾತ್ರವಹಿಸುತ್ತವೆ. ಎಸ್‌ಪಿಒ2 ಮಟ್ಟವು 90% ಕ್ಕಿಂತ ಕಡಿಮೆಯಿದ್ದರೆ, ಅಸ್ವಸ್ಥರ ಸ್ಥಿತಿಯನ್ನು ತೀವ್ರವೆಂದು ಪರಿಗಣಿಸಲಾಗಿ, ಅವರಿಗೆ ತುರ್ತು ಚಿಕಿತ್ಸೆಯ ಅವಶ್ಯಕತೆಯಿರುತ್ತೆ. ಅದರ ಮಟ್ಟವು 95% ಕ್ಕಿಂತ ಹೆಚ್ಚಿದ್ದರೆ, ಅಸ್ವಸ್ಥರನ್ನು ಹೆಚ್ಚಾಗಿ ಲಕ್ಷಣರಹಿತವೆಂದು ಪರಿಗಣಿಸಲಾಗುತ್ತದೆ. “ಮನೆಯಲ್ಲಿ ಪ್ರತ್ಯೇಕತೆಯ ಸಲಹೆ ನೀಡುವ ಪ್ರತಿಯೊಬ್ಬ ಅಸ್ವಸ್ಥರಿಗೆ ಆಕ್ಸಿಮೀಟರ್‌ಗಳನ್ನು ಒದಗಿಸುವಂತೆ ನಾವು ಸರ್ಕಾರವನ್ನು ಕೋರುತ್ತಿದ್ದೇವೆ” ಎಂದು ಡಾ.ಗಿರಿಧರ ಹೇಳುತ್ತಾರೆ.

ವೈದ್ಯರನ್ನು ಸಂಪರ್ಕಿಸಿ: ನೀವು ರೋಗಲಕ್ಷಣಗಳನ್ನು ಗಮನಿಸಿದರೆ, ವೈದ್ಯರೊಂದಿಗೆ ಮಾತನಾಡಿ; ಟೆಲಿ-ಸಮಾಲೋಚನೆಯ ಮೂಲಕ ಮಾತಾಡುವುದು ಉತ್ತಮ. ನೀವು ‘ಆರೋಗ್ಯಸೇತು’ ಸ್ವಯಂ ಮೌಲ್ಯಮಾಪನ ಅಪ್ಲಿಕೇಶನ್ ಅನ್ನು ಸಹ ಬಳಸಬಹುದು. ಈ ಪ್ರಾಥಮಿಕ ಮೌಲ್ಯಮಾಪನದ ಆಧಾರದ ಮೇಲೆ, ಪರೀಕ್ಷೆಗೆ ಒಳಪಡಬೇಕೇ ಅಥವಾ ಬೇಡವೇ ಎಂಬ ಬಗ್ಗೆ ನಿರ್ಧಾರ ತೆಗೆದುಕೊಳ್ಳಬೇಕು.

ಪರೀಕ್ಷಾ ಮಾನದಂಡಗಳು: ನಿಯಂತ್ರಣ ಮತ್ತು ಬಫರ್ ವಲಯಗಳಲ್ಲಿ ಐಎಲ್ಐ ಮತ್ತು ಎಸ್.ಏ.ಆರ್.ಐ (ತೀವ್ರವಾದ ಉಸಿರಾಟದ ಸೋಂಕಿನೊಂದಿಗೆ ಜ್ವರ ಮತ್ತು ಕೆಮ್ಮು) ರೋಗಲಕ್ಷಣಗಳಿರುವ  ಎಲ್ಲಾ ಅಸ್ವಸ್ಥರನ್ನು ತಕ್ಷಣ ಪರೀಕ್ಷಿಸಲಾಗುವುದು. ನಿಯಂತ್ರಣವಲ್ಲದ ಮತ್ತು ಬಫರ್ ವಲಯಗಳಿಂದ ಉಳಿದವರನ್ನು ವೈದ್ಯರ ಸಲಹೆಯ ಆಧಾರದ ಮೇಲೆ ಪರೀಕ್ಷಿಸಲಾಗುವುದು.

ಪರೀಕ್ಷೆಗೆ ಒಳಗಾಗುವುದು: ಪರೀಕ್ಷೆಯ ಫಲಿತಾಂಶಗಳು ಹೊರಬರುವವರೆಗೆ, ನೀವು ಸಾಧ್ಯವಾದಷ್ಟು ಮನೆಯಲ್ಲಿ ಪ್ರತ್ಯೇಕವಾಗಿರಬೇಕು ಎಂದು ಡಾ.ಗಿರಿಧರ ಹೇಳಿದ್ದಾರೆ.

ಜಿಲ್ಲೆ ಮತ್ತು ತಾಲ್ಲೂಕು ಮಟ್ಟದಲ್ಲಿ ಜ್ವರ ಚಿಕಿತ್ಸಾಲಯಗಳು / ಸ್ವ್ಯಾಬ್ ಸಂಗ್ರಹ ಕೇಂದ್ರಗಳಲ್ಲಿ ಪರೀಕ್ಷೆ ನಡೆಸಲಾಗುತ್ತದೆ. ಬೆಂಗಳೂರಿನಲ್ಲಿ ಕನಿಷ್ಠ 113 ಜ್ವರ ಚಿಕಿತ್ಸಾಲಯಗಳು / ಸ್ವ್ಯಾಬ್ ಸಂಗ್ರಹ ಕೇಂದ್ರಗಳಲ್ಲಿ (66 ಖಾಸಗಿ ಮತ್ತು 47 ಸರ್ಕಾರ), ನಿಮ್ಮ ಸ್ಯಾಂಪಲ್ಲುಗಳನ್ನು ತೆಗೆದುಕೊಳ್ಳಲಾಗುವುದು.

ಜ್ವರ ಚಿಕಿತ್ಸಾಲಯಗಳು / ಸ್ವ್ಯಾಬ್ ಸಂಗ್ರಹ ಕೇಂದ್ರಗಳಿಂದ ಸ್ಯಾಂಪಲ್ಲುಗಳನ್ನು ಬೆಂಗಳೂರಿನ 25 ಐಸಿಎಂಆರ್ ಅನುಮೋದಿತ ಪರೀಕ್ಷಾ ಪ್ರಯೋಗಾಲಯಗಳಲ್ಲಿ ಒಂದಕ್ಕೆ ಕಳುಹಿಸಲಾಗುತ್ತದೆ. ಎಲ್ಲಾ ಜ್ವರ ಚಿಕಿತ್ಸಾಲಯಗಳು ಮತ್ತು ಪ್ರಯೋಗಾಲಯಗಳು ಎಲ್ಲಾ ಪರೀಕ್ಷಾ ವರದಿಗಳನ್ನು ಬಿಬಿಎಂಪಿ ಅಥವಾ ರಾಜ್ಯ ಆರೋಗ್ಯ ಇಲಾಖೆಗೆ ಕಳುಹಿಸುತ್ತವೆ. ಆದ್ದರಿಂದ, ನಿಮ್ಮ ಫಲಿತಾಂಶಗಳನ್ನು ನೀವು ಲ್ಯಾಬ್‌ನಿಂದ ಪಡೆಯಲಾಗದಿರಬಹುದು, ಬದಲಿಗೆ ಅವುಗಳನ್ನು ಬಿಬಿಎಂಪಿಯಿಂದ ಪಡೆಯಬಹುದು.

ಬಿಬಿಎಂಪಿ ಆರೋಗ್ಯ ಅಧಿಕಾರಿಗಳ ವಿವರಗಳು

ತುರ್ತು ಸಂದರ್ಭಗಳಲ್ಲಿ ನಿಮ್ಮ ಬಿಬಿಎಂಪಿ ವಲಯದ ಆರೋಗ್ಯ ಅಧಿಕಾರಿಯನ್ನು ನೀವು ಸಂಪರ್ಕಿಸಬಹುದು. ಕೋವಿಡ್ ಪಾಸಿಟಿವ್ ಸೋಂಕಿತರ ಮುಖ್ಯ ಸಂಪರ್ಕದವರನ್ನು ಪರೀಕ್ಷಿಸುವ ಜವಾಬ್ದಾರಿಯೂ ಅವರ ಮೇಲಿದೆ.

ಪೂರ್ವ ವಲಯ ಡಾ.ಸಿದ್ದಪ್ಪ 9480684214
ವೆಸ್ಟ್ ಡಾ.ಹೆಗ್ಡೆ9480683928
ದಕ್ಷಿಣ ಡಾ.ಶಿವಕುಮಾರ್ 9480973395
ಆರ್.ಆರ್. ನಗರ ಡಾ.ಬಾಲಸುಂದರ್ 9480685435
ದಾಸರಹಳ್ಳಿ ಡಾ.ಬಾಲಸುಂದರ್ 9480685435
ಬೊಮ್ಮನಹಳ್ಳಿ ಡಾ.ಸುರೇಶ್ 9480683473
ಯಲಹಂಕ ಡಾ.ಸವಿತಾ 9480684570
ಮಹಾದೇವಪುರ ಡಾ.ಸುರೇಂದ್ರ 9801750539

ಕ್ವಾರಂಟೈನ್ ಮತ್ತು ಪ್ರತ್ಯೇಕತೆಗೂ ವ್ಯತ್ಯಾಸ

ಕ್ವಾರಂಟೈನ್: ವೈರಸ್‌ಗೆ ತುತ್ತಾದ ಜನರಲ್ಲಿ ಯಾವುದೇ ರೋಗಲಕ್ಷಣಗಳು ಕಂಡುಬಂದಿದೆಯೇ ಎಂದು ಪರೀಕ್ಷಿಸಲು ಓಡಾಟ ನಿರ್ಬಂಧಿಸುವುದು.

ಪ್ರತ್ಯೇಕತೆ: ಶಂಕಿತ ಮತ್ತು / ಅಥವಾ ಸೋಂಕಿತ ವ್ಯಕ್ತಿಯನ್ನು ವೈರಸ್‌ಗೆ ತುತ್ತಾಗದವರಿಂದ ಬೇರ್ಪಡಿಸುವುದು.

ಮೂಲ: ಬೆಂಗಳೂರು ಅಪಾರ್ಟ್ಮೆಂಟ್ ಫೆಡರೇಶನ್ ಮಾರ್ಗಸೂಚಿಗಳು

3. ನಿಮ್ಮ ಪರೀಕ್ಷೆಯಲ್ಲಿ ಕೋವಿಡ್  ಖಚಿತವಾದರೆ ಏನು ಮಾಡಬೇಕು?

ನಿಮಗೆ ಕೋವಿಡ್ ಸೋಂಕು ಖಚಿತವಾದರೆ, ಮೊದಲು ನಿಮ್ಮ ಜಿಲ್ಲಾ ಕಣ್ಗಾವಲು ಅಧಿಕಾರಿ (ಡಿಎಸ್‌ಒ) / ಬಿಬಿಎಂಪಿ ಸ್ಥಳೀಯ ವಾರ್ಡ್ ಅಧಿಕಾರಿಗಳಿಗೆ ತಿಳಿಸಿ, ಮತ್ತು ಈ ಕೆಳಗಿನ ಸಹಾಯವಾಣಿಗಳಲ್ಲಿ ಒಂದನ್ನು ಕರೆ ಮಾಡಿ:

  • 14410
  • 104
  • 080-1077
  • 080-22967200

ನೀವು ಅಪಾರ್ಟ್ಮೆಂಟ್ ನಿವಾಸಿಯಾಗಿದ್ದರೆ, ತಕ್ಷಣ ಬೆಂಬಲ ನೀಡುವಂತಹ ಮತ್ತು ಅಧಿಕಾರಿಗಳಿಗೆ ಖಚಿತ ಮಾಹಿತಿ ನೀಡುವಂತಹ ನಿಮ್ಮ ಸ್ಥಳೀಯ ವಸತಿ / ಅಪಾರ್ಟ್ಮೆಂಟ್ ಸಂಘಕ್ಕೆ ತಿಳಿಸಬೇಕು.

ಖಚಿತವಾಗಿರುವ ಫಲಿತಾಂಶಗಳ ಬಗ್ಗೆ ಲ್ಯಾಬ್‌ಗಳು ನೇರವಾಗಿ ಬಿಬಿಎಂಪಿ / ರಾಜ್ಯ ಅಧಿಕಾರಿಗಳಿಗೆ ತಿಳಿಸುತ್ತವೆ. ಬಿಬಿಎಂಪಿಯು ವೈದ್ಯಕೀಯ ತಪಾಸಣೆಗಾಗಿ ಆರೋಗ್ಯ ತಂಡವನ್ನು ಅಸ್ವಸ್ಥರ ನಿವಾಸಕ್ಕೆ ಕಳುಹಿಸುವುದು. ಅವರು ಅಸ್ವಸ್ಥರ ದೇಹದ ಉಷ್ಣತೆ, ಎಸ್‌ಪಿಒ2 ಮಟ್ಟ ಮತ್ತು ಸಹ-ಕಾಯಿಲೆಗಳನ್ನು (ಅಧಿಕ ರಕ್ತದೊತ್ತಡ, ಮಧುಮೇಹ, ಟಿಬಿ, ಎಚ್‌ಐವಿ, ಕ್ಯಾನ್ಸರ್, ಇತ್ಯಾದಿ) / ಗರ್ಭಧಾರಣೆಯನ್ನು ಪರಿಶೀಲಿಸುತ್ತಾರೆ.

ನಿಮ್ಮ ರೋಗಲಕ್ಷಣಗಳಿಗೆ ಅನುಗುಣವಾಗಿ, ನೀವು ಮನೆ ಪ್ರತ್ಯೇಕತೆಗೆ ಅರ್ಹರಾಗಿದ್ದೀರಾ ಅಥವಾ ಕೋವಿಡ್ ಸೌಲಭ್ಯದಲ್ಲಿ ಚಿಕಿತ್ಸೆಯ ಅಗತ್ಯವಿದೆಯೇ ಎಂದು ಆರೋಗ್ಯ ತಂಡವು ನಿರ್ಧರಿಸುತ್ತದೆ.

ಪ್ರತ್ಯೇಕತೆ (ಐಸೊಲೇಷನ್) ಕಿಟ್ ಸಿದ್ಧಪಡಿಸುವುದು

ನೀವು ಮನೆ ಪ್ರತ್ಯೇಕತೆಗೆ ಅರ್ಹರಾಗಿದ್ದರೂ, ಅಥವಾ ಆರೈಕೆ ಕೇಂದ್ರ ಅಥವಾ ಆಸ್ಪತ್ರೆಗೆ ಹೋಗಬೇಕಾದರೂ, ಕಿಟ್ ಸಿದ್ಧಪಡಿಸುವುದು ಒಳ್ಳೆಯದು. (ಕೃಪೆ: ಡಿಸೈನ್ ಬೇಕು)

ಮಾಹಿತಿ

1) ಕುಟುಂಬ ವೈದ್ಯರ / ನೆರೆಹೊರೆಯ ವೈದ್ಯರ, ಆರ್‌ಡಬ್ಲ್ಯೂಎ ಪದಾಧಿಕಾರಿಗಳ / ಸ್ಥಳೀಯ ಸ್ವಯಂಸೇವಕ ಸಂಪರ್ಕಗಳು

2) ಈ ಸಂಪರ್ಕ ಸಂಖ್ಯೆಗಳು – ನಿಮ್ಮ ಜಿಲ್ಲೆಯ ಕೋವಿಡ್ ಸಹಾಯವಾಣಿ, ಜಿಲ್ಲಾ ಆಸ್ಪತ್ರೆ, ಆಂಬ್ಯುಲೆನ್ಸ್, ಔಷಧಾಲಯ, ಆಮ್ಲಜನಕ ಸಿಲಿಂಡರ್ ಒದಗಿಸುವವರು, ಸ್ಥಳೀಯ ಪ್ಲಾಸ್ಮಾ ಬ್ಯಾಂಕ್, ಕೋವಿಡ್-19 ರಿಂದ ಇತ್ತೀಚೆಗೆ ಚೇತರಿಸಿಕೊಂಡ ಜನರು, ನಿಮ್ಮ ಪ್ರದೇಶಕ್ಕೆ ಸೇವೆ ಸಲ್ಲಿಸುತ್ತಿರುವ ಖಾಸಗಿ ಮತ್ತು ಸರ್ಕಾರಿ ಕೋವಿಡ್-19 ಪರೀಕ್ಷಾ ಪ್ರಯೋಗಾಲಯಗಳು.

ದಾಖಲೆಗಳು

1) ವಿಮಾ ವಿವರಗಳು, ವೈದ್ಯಕೀಯ ದಾಖಲೆಗಳು, ಅಲರ್ಜಿಗಳ ಪಟ್ಟಿ ಇತ್ಯಾದಿ.

2) ಕೋವಿಡ್ ಪರೀಕ್ಷೆಗೆ ಫಾರ್ಮ್: ನೀವು ಅನಾರೋಗ್ಯದಿಂದ ಬಳಲುತ್ತಿರುವಾಗ ಪರಿಶ್ರಮ ಕಡಿಮೆ ಮಾಡಲು, ಪ್ರತಿಯೊಬ್ಬರಿಗೂ ತುಂಬಿದ ಮಾಹಿತಿಯೊಂದಿಗೆ ಬಿಡಿ ಪ್ರತಿಗಳು

3) ಮನೆ ಪ್ರತ್ಯೇಕತೆ ಘೋಷಣೆ – ಮುದ್ರಿತ, ಕೆಲವು ಬಿಡಿ ಪ್ರತಿಗಳು ಮತ್ತು ಹೆಚ್ಚುವರಿ ಖಾಲಿ ಹಾಳೆಯೊಂದಿಗೆ.
ಇತರ ವಸ್ತುಗಳು

1) ಬಿಡಿ ಬ್ಯಾಟರಿಗಳೊಂದಿಗೆ ಫಿಂಗರ್ ಪಲ್ಸ್ ಆಕ್ಸಿಮೀಟರ್. ಸಾಂಕ್ರಾಮಿಕ ರೋಗಶಾಸ್ತ್ರಜ್ಞ ರಿಫಾ ಖಾನ್ ಪ್ರತಿ ಕುಟುಂಬಕ್ಕೆ ಒಂದನ್ನು ಕೊಂಡುಕೊಳ್ಳಲು ಸೂಚಿಸುತ್ತಾರೆ, ಅಥವಾ ಸ್ಥಳೀಯ ಆರ್‌ಡಬ್ಲ್ಯೂಎ ಅಥವಾ ಅಪಾರ್ಟ್‌ಮೆಂಟ್ ಅಸೋಸಿಯೇಷನ್ ಕೆಲವನ್ನು ಸಂಗ್ರಹ ಮಾಡಿಡಬಹುದು.

2) ಫೇಸ್ ಮಾಸ್ಕ್, ಥರ್ಮಾಮೀಟರ್, ಸಾಮಾನ್ಯ ಔಷಧಿಗಳು

3) ಶೌಚಾಲಯ ಮತ್ತು ನೈರ್ಮಲ್ಯ ಕಿಟ್

4) ವಾಟರ್ ಬಾಟಲ್ ಮತ್ತು ಪಾತ್ರೆ-ಪಡಗ (ಕ್ಯಾರೆಂಟೈನ್ ಸಮಯದಲ್ಲಿ ಬಳಸಲು), ವಿದ್ಯುತ್ ಕೆಟಲ್ ಮತ್ತು ಸ್ಟೀಮರ್

5) ಕಸವನ್ನು ಸರಿಯಾಗಿ ವಿಲೇವಾರಿ ಮಾಡಲು ಕಸದ ಚೀಲಗಳು

6) ದೊಡ್ಡ ಪ್ರಮಾಣದ ಸೋಡಿಯಂ ಹೈಪೋಕ್ಲೋರೈಟ್ ಅಥವಾ ಲೈಜೋಲ್ ನಂತಹ ಸೋಂಕುನಿವಾರಕ, ಮತ್ತು ಹ್ಯಾಂಡ್ ಸ್ಯಾನಿಟೈಸರ್

7) ಮೊಬೈಲ್ ಚಾರ್ಜರ್, ಕೇಬಲ್, ಪವರ್ ಬ್ಯಾಂಕ್, ಲ್ಯಾಪ್‌ಟಾಪ್

8) ಆಸ್ಪತ್ರೆಯಲ್ಲಿ ಪಾವತಿಗಾಗಿ ನಗದು, ಕ್ರೆಡಿಟ್ ಕಾರ್ಡ್, ಚೆಕ್ ಬುಕ್, ಬ್ಯಾಂಕಿಂಗ್ ವಿವರಗಳು ಇತ್ಯಾದಿ

ಸಂಪರ್ಕವಾದವರನ್ನು ಪತ್ತೆಹಚ್ಚಲು ಹೇಗೆ ಸಹಾಯ ಮಾಡುವುದು

ನಿಮ್ಮ ದೈನಂದಿನ ಸಂಪರ್ಕಗಳನ್ನು ಪಟ್ಟಿ ಮಾಡುವ ದಿನಚರಿಯನ್ನು ಇಡುವುದು ಉತ್ತಮ ಅಭ್ಯಾಸ. ಒಂದು ವೇಳೆ ನಿಮ್ಮ ಪರೀಕ್ಷೆಯಲ್ಲಿ ಸೋಂಕು ಖಚಿತವಾದರೆ, ನಿಮ್ಮ ಎಲ್ಲಾ ಸಂಪರ್ಕವಾದವರಿಗೆ ತ್ವರಿತವಾಗಿ ತಿಳಿಸಬಹುದು ಮತ್ತು ಕ್ವಾರಂಟೈನ್ಗೆ ಹೋಗಲು ತಿಳಿಸಬಹುದು.

ನಿಮ್ಮ ಮನೆಗೆಲಸದವರು, ಅಡುಗೆಯವರು ಅಥವಾ ಚಾಲಕರು ಪ್ರಾಥಮಿಕ ಸಂಪರ್ಕಗಳಾಗಿದ್ದರೆ, ನೀವು / ನಿಮ್ಮ ಕುಟುಂಬದ ಸದಸ್ಯರು ತಕ್ಷಣ ಖಚಿತವಾಗಿ ಅವರಿಗೆ ತಿಳಿಸಿ. ಬಿಬಿಎಂಪಿ ಕಣ್ಗಾವಲು ತಂಡದ ಆದೇಶದಂತೆ ಅವರು ಮತ್ತು ಅವರ ಇತರ ಸಂಪರ್ಕದವರು (ದ್ವಿತೀಯ ಸಂಪರ್ಕದವರು) ತಮ್ಮನ್ನು ತಾವು ಕ್ವಾರಂಟೈನ್ ಗೊಳಗಾಗಿಸಿಕೊಳ್ಳಬೇಕು.

ಕಳೆದ ಏಳು ದಿನಗಳಲ್ಲಿ ನಿಮ್ಮ ಪ್ರಾಥಮಿಕ ಸಂಪರ್ಕದವರ ಹೆಸರು ಮತ್ತು ಫೋನ್ ಸಂಖ್ಯೆಯನ್ನು ಸರ್ಕಾರದ ಕಣ್ಗಾವಲು ತಂಡದೊಂದಿಗೆ ಹಂಚಿಕೊಳ್ಳಿ. ನೀವು ಅಂಗಡಿಗಳು, ಕಚೇರಿಗಳು, ಸಭೆ-ಸಮಾರಂಭಗಳು ಮುಂತಾದ ಸಾರ್ವಜನಿಕ ಸ್ಥಳಗಳಿಗೆ ಭೇಟಿ ನೀಡಿದ್ದರೆ, ದಿನಾಂಕ ಮತ್ತು ಸಮಯದ ಜೊತೆಗೆ ಇದನ್ನು ಪಟ್ಟಿ ಮಾಡಿ. ಅಗತ್ಯವಿದ್ದಾಗ ಒಪ್ಪಿಸಲು ಈ ಪಟ್ಟಿಯನ್ನು ಸಿದ್ಧವಾಗಿಡಿ.

4. ಕೋವಿಡ್ ಸೌಲಭ್ಯಕ್ಕೆ ಸ್ಥಳಾಂತರ

ತಪಾಸಣೆಯ ಆಧಾರದ ಮೇಲೆ, ಅಸ್ವಸ್ಥರಿಗೆ ಈ ಕೆಳಗಿನ ಆಯ್ಕೆಗಳಲ್ಲಿ ಒಂದನ್ನು ಶಿಫಾರಸು ಮಾಡಲಾಗುತ್ತೆ – ಮನೆಯ ಪ್ರತ್ಯೇಕತೆ, ಅಥವಾ ಕೋವಿಡ್ ಕೇರ್ ಸೆಂಟರ್‌ಗಳಲ್ಲಿ (ಸಿಸಿಸಿಗಳು), ಸರ್ಕಾರಿ ಆಸ್ಪತ್ರೆಗಳಲ್ಲಿ ಅಥವಾ ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಮತ್ತು ಪ್ರತ್ಯೇಕತೆ.

ಲಕ್ಷಣರಹಿತ ಅಸ್ವಸ್ಥರು

ದೇಹದ ಉಷ್ಣತೆಯು 37.5 ℃ ಗಿಂತ ಕಡಿಮೆ, ಮತ್ತು ಎಸ್‌ಪಿಒ2 95% ಕ್ಕಿಂತ ಹೆಚ್ಚು ಮಟ್ಟವನ್ನು ಹೊಂದಿರುವವರು. ಅವರನ್ನು ಕೋವಿಡ್ ಕೇರ್ ಸೆಂಟರ್ (ಸಿಸಿಸಿ) ಗೆ ಸ್ಥಳಾಂತರಿಸಲಾಗುತ್ತದೆ ಅಥವಾ ಮನೆ ಪ್ರತ್ಯೇಕತೆಗೆ ಸಲಹೆ ನೀಡಲಾಗುತ್ತದೆ.

ಸಿಸಿಸಿ ಎಂದರೆ ಹೋಟೆಲ್‌, ಹಾಸ್ಟೆಲ್‌, ಹಾಲ್‌ ಇತ್ಯಾದಿಗಳನ್ನು ಕೋವಿಡ್ ಅಸ್ವಸ್ಥರಿಗೆ ಸೌಲಭ್ಯಗಳಾಗಿ ಮಾರ್ಪಡಿಸಲಾದ ಸ್ಥಳಗಳು. ಮುಂಚೆ, ಅವುಗಳನ್ನು ರೋಗಲಕ್ಷಣಗಳಿದ್ದು ಸ್ವಸ್ಥರಾಗಿರುವವರಿಗೆ ಮಾತ್ರ ಬಳಸಲಾಗುತ್ತಿತ್ತು, ಆದರೆ ಈಗ ಕಡಿಮೆ ಲಕ್ಷಣಗಳ ಅಥವಾ ಲಕ್ಷಣರಹಿತ ಪ್ರಕರಣಗಳನ್ನು ಅಲ್ಲಿ ಚಿಕಿತ್ಸೆ ನೀಡಲಾಗುತ್ತದೆ.

ಎಲ್ಲಾ ಸಿಸಿಸಿಗಳಲ್ಲಿ ಪಲ್ಸ್ ಆಕ್ಸಿಮೀಟರ್, ಕೈಯಲ್ಲಿ ಹಿಡಿಯುವ ಥರ್ಮಲ್ ಸ್ಕ್ಯಾನರ್ ಮತ್ತು ಬಿಪಿ ಉಪಕರಣಗಳನ್ನು ಅಳವಡಿಸಬೇಕು. ಅವರು ಎಲ್ಲಾ ಸಮಯದಲ್ಲೂ 500 ಅಸ್ವಸ್ಥರಿಗೆ ಒಬ್ಬರ ಲೆಕ್ಕದಲ್ಲಿ ದಾದಿಯರನ್ನು ಹೊಂದಿರಬೇಕು.

“ಅಸ್ವಸ್ಥರಿಗೆ ಅವರ ರೋಗಲಕ್ಷಣಗಳನ್ನು ಅವಲಂಬಿಸಿ ಅವರು ಹೇಗೆ ಚಿಕಿತ್ಸೆ ಪಡೆಯಬಹುದೆಂದು ಆಯ್ಕೆ ನೀಡಲಾಗುತ್ತೆ. ಹೆಚ್ಚಿನ ಪ್ರಕರಣಗಳಂತೆ ಅಸ್ವಸ್ಥರ ಲಕ್ಷಣಗಳು ಸಣ್ಣವಾಗಿದ್ದರೆ, ಅವರಿಗೆ ಮನೆಯಲ್ಲಿ ಅಥವಾ ಕೋವಿಡ್ ಆರೈಕೆ ಕೇಂದ್ರದಲ್ಲಿ ಪ್ರತ್ಯೇಕಿಸುವ ಆಯ್ಕೆಯನ್ನು ನೀಡಲಾಗುತ್ತದೆ. ಹೆಚ್ಚಿನವರು ಸಾಧ್ಯವಾದಲ್ಲಿ ಮನೆ ಪ್ರತ್ಯೇಕತೆಯನ್ನು ಆರಿಸಿಕೊಳ್ಳುತ್ತಾರೆ ಎಂದು ನಾವು ನಿರೀಕ್ಷಿಸುತ್ತೇವೆ, ಏಕೆಂದರೆ ನಿಜವಾಗಿಯೂ ಅಗತ್ಯವಿರುವವರಿಗೆ [ತೀವ್ರ ಅಸ್ವಸ್ಥರಿಗೆ] ಹಾಸಿಗೆಗಳನ್ನು ಉಳಿಸುವುದು ಮುಖ್ಯವಾಗಿದೆ ” ಎಂದು ಡಾ.ಗಿರಿಧರ ಹೇಳುತ್ತಾರೆ.

ಲಕ್ಷಣರಹಿತ ಅಸ್ವಸ್ಥರಿಗೆ ಮನೆ ಪ್ರತ್ಯೇಕತೆ

ಮನೆ ಪ್ರತ್ಯೇಕತೆಗೆ ಅರ್ಹರಾಗಲು, ನೀವು ಈ ಕೆಳಗಿನ ಮಾನದಂಡಗಳನ್ನು ಪೂರೈಸಬೇಕು:

* ಜಿಲ್ಲಾ / ಬಿಬಿಎಂಪಿ ಅಧಿಕಾರಿಗಳ ಆರೋಗ್ಯ ತಂಡವು ಮೌಲ್ಯಮಾಪನ ಮಾಡಿರತಕ್ಕದ್ದು
* ಚಿಕಿತ್ಸಕವಾಗಿ ಲಕ್ಷಣರಹಿತ / ಸಣ್ಣ ಲಕ್ಷಣಗಳಿರಬೇಕು: ತಾಪಮಾನ <38 ℃, ಎಸ್‌ಪಿಒ 2 ಮಟ್ಟಗಳು> 95%, 60 ವರ್ಷಕ್ಕಿಂತ ಕಡಿಮೆ ವಯಸ್ಸಿನವರಿರಬೇಕು.
* ಮೂತ್ರಪಿಂಡ ಕಾಯಿಲೆ (ಡಯಾಲಿಸಿಸ್ ಅಗತ್ಯ), ಹೃದ್ರೋಗ, ಪಾರ್ಶ್ವವಾಯು, ಟಿಬಿ, ಕ್ಯಾನ್ಸರ್, ಎಚ್‌ಐವಿ ಮುಂತಾದ ಸಹ-ಕಾಯಿಲೆಗಳು ಇರಬಾರದು. ದೇಹದ ಇಮ್ಯುನಿಟಿ ಕಡಿಮೆ ಇರಬಾರದು, ಅಥವಾ ಸ್ಟೀರಾಯ್ಡ್ಗಳು ಅಥವಾ ಇಮ್ಯುನೊಸಪ್ರೆಸೆಂಟ್‌ಗಳನ್ನು ತೆಗೆದುಕೊಂಡಿರಬಾರದು.
* ಗರ್ಭಿಣಿಯರಾದರೆ ಹೆರಿಗೆಯ ನಿರೀಕ್ಷಿತ ದಿನಾಂಕಕ್ಕಿಂತ ನಾಲ್ಕು ವಾರಗಳ ಮೊದಲಿರಬೇಕು
* ಮನೆಯಲ್ಲಿ ಸ್ವಯಂ-ಪ್ರತ್ಯೇಕತೆ ಮತ್ತು ತಕ್ಷಣದ ಸಂಪರ್ಕದವರನ್ನು ಪ್ರತ್ಯೇಕಿಸಲು ಅಗತ್ಯವಾದ ಸೌಲಭ್ಯಗಳನ್ನು ಹೊಂದಿರಬೇಕು – ಪ್ರತ್ಯೇಕ ಮತ್ತು ಸೂಕ್ತ ಗಾಳಿ ಇರುವ ಕೊಠಡಿ
* ಮನೆ ಸೂಕ್ತವೆಂದು ಕಂಡುಬಂದಿಲ್ಲದಿದ್ದರೆ, ಅಥವಾ ಅಸ್ವಸ್ಥರ ಲಕ್ಷಣಗಳು ಉಲ್ಬಣಗೊಂಡರೆ, ಅವರನ್ನು ಸಿಸಿಸಿಗಳಿಗೆ ಅಥವಾ ಆಸ್ಪತ್ರೆಗಳಿಗೆ ಸ್ಥಳಾಂತರಿಸಲಾಗುತ್ತದೆ.

ಮನೆ ಪ್ರತ್ಯೇಕತೆಯ ಬಗ್ಗೆ ಸಂಪೂರ್ಣ ಮಾರ್ಗಸೂಚಿಗಳನ್ನು ಇಲ್ಲಿ ಓದಿ (ಕರ್ನಾಟಕ ಸರ್ಕಾರದ ಕೋವಿಡ್ -19 ಸೈಟ್).

ರೋಗಲಕ್ಷಣಗಳಿರುವ ಅಸ್ವಸ್ಥರು

“ಚಿಕಿತ್ಸೆಯ ಅಗತ್ಯವಿರುವ ರೋಗಲಕ್ಷಣಗಳನ್ನು ನೀವು ಹೊಂದಿರುವಿರಿ ಎಂದು ವೈದ್ಯಕೀಯ ತಂಡವು ಕಂಡುಕೊಂಡರೆ, ಮೂರು ಆಯ್ಕೆಗಳಿವೆ – ಸರ್ಕಾರಿ ಕೋವಿಡ್ ಆಸ್ಪತ್ರೆಗಳು (ಉಚಿತ ಚಿಕಿತ್ಸೆ), ಖಾಸಗಿ ಆಸ್ಪತ್ರೆಗಳು (ವಿಮೆಯೊಂದಿಗೆ), ಮತ್ತು ಚಿಕಿತ್ಸೆಗೆ ಹೆಚ್ಚಿನ ಹಣವನ್ನು ಪಾವತಿಸಬಹುದಾದವರಿಗೆ ಖಾಸಗಿ ಆಸ್ಪತ್ರೆಗಳು” ಎಂದು ಡಾ.ಗಿರಿಧರ ಹೇಳುತ್ತಾರೆ .

ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಕೆ ಅವರು ಜುಲೈ 4 ರಂದು ಬಿಡುಗಡೆ ಮಾಡಿದ ಪಟ್ಟಿಯ ಪ್ರಕಾರ, ಬೆಂಗಳೂರಿನಲ್ಲಿ ಕೋವಿಡ್ ಚಿಕಿತ್ಸೆಗಾಗಿ 19 ಸರ್ಕಾರಿ ಆಸ್ಪತ್ರೆಗಳು / ವೈದ್ಯಕೀಯ ಕಾಲೇಜುಗಳಿವೆ. ಇವುಗಳಲ್ಲಿ ಮೂರು ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಗಳು (ಡಿಸಿಎಚ್) ಮತ್ತು 16 ಗೊತ್ತುಪಡಿಸಿದ ಕೋವಿಡ್ ಆರೋಗ್ಯ ಕೇಂದ್ರಗಳು (ಡಿಸಿಎಚ್‌ಸಿ).

ನಗರದಲ್ಲಿ ಕೋವಿಡ್ ಚಿಕಿತ್ಸೆಗಾಗಿ 72 ಖಾಸಗಿ ಆಸ್ಪತ್ರೆಗಳಿವೆ ಎಂದು ವೈದ್ಯಕೀಯ ಶಿಕ್ಷಣ ಸಚಿವ ಡಾ.ಸುಧಾಕರ್ ಹೇಳಿದ್ದಾರೆ.

ಖಾಸಗಿ ಆಸ್ಪತ್ರೆಗಳಲ್ಲಿ ಚಿಕಿತ್ಸೆ ಪಡೆಯಲು ಎರಡು ಮಾರ್ಗಗಳಿವೆ. ಸಾರ್ವಜನಿಕ ಆರೋಗ್ಯ ಅಧಿಕಾರಿಗಳು ಅಸ್ವಸ್ಥರನ್ನು ಖಾಸಗಿ ಸಂಸ್ಥೆಗಳ ಬಳಿ ಕಳುಹಿಸಿದ್ದರೆ, ಆಯುಷ್ಮಾನ್ ಭಾರತ್-ಆರೋಗ್ಯ ಕರ್ನಾಟಕ (AB-Ark) ಯೋಜನೆಯಡಿ ಚಿಕಿತ್ಸೆಯ ವೆಚ್ಚವನ್ನು ವಿಮಾ ಪ್ಯಾಕೇಜ್‌ಗಳಿಂದ ಸಬ್ಸಿಡಿ ಪೂರೈಸಲಾಗುತ್ತದೆ.

ಅಸ್ವಸ್ಥರು ಖಾಸಗಿ ಆಸ್ಪತ್ರೆಗಳನ್ನು ನೇರವಾಗಿ ಸಂಪರ್ಕಿಸಿದರೆ ವೆಚ್ಚ ಹೆಚ್ಚಾಗುತ್ತದೆ, ಆದರೂ ರಾಜ್ಯ ಸರ್ಕಾರವು ವೆಚ್ಚವನ್ನು ನಿಯಂತ್ರಿಸುತ್ತಿದೆ. ಖಾಸಗಿ ಆಸ್ಪತ್ರೆಗಳಿಗೆ ದಿನಕ್ಕೆ ಚಿಕಿತ್ಸೆಯ ವೆಚ್ಚವನ್ನು ಈ ಕೆಳಗಿನಂತೆ ನಿಗದಿಪಡಿಸಲಾಗಿದೆ.

ನಿಮ್ಮನ್ನು DCHC ಅಥವಾ DCH ಗೆ ಕಳುಹಿಸಲಾಗುತ್ತದೆಯೇ ಎಂಬುದು ನಿಮ್ಮ ರೋಗಲಕ್ಷಣಗಳನ್ನು ಅವಲಂಬಿಸಿರುತ್ತದೆ.
  • ಕಡಿಮೆ ಮತ್ತು ಮಧ್ಯಮ ರೋಗಲಕ್ಷಣಗಳು 

ದೇಹದ ಉಷ್ಣತೆಯು 37.5℃ ಗಿಂತ ಹೆಚ್ಚಿದ್ದರೆ ಮತ್ತು ಎಸ್‌ಪಿಒ2 ಮಟ್ಟಗಳು 90-94%ರ ನಡುವೆ ಇದ್ದರೆ, ಅಸ್ವಸ್ಥರನ್ನು ಗೊತ್ತುಪಡಿಸಿದ ಕೋವಿಡ್ ಆರೋಗ್ಯ ಕೇಂದ್ರಗಳಿಗೆ (ಡಿಸಿಎಚ್‌ಸಿ) ಸ್ಥಳಾಂತರಿಸಲಾಗುತ್ತದೆ.

ಡಿಸಿಎಚ್‌ಸಿಯಲ್ಲಿ, ಹೆಚ್ಚು ಸಮಗ್ರ ಆರೋಗ್ಯ ತಪಾಸಣೆ ನಡೆಸಲಾಗುವುದು. ನಿಮ್ಮ ಬಿಪಿ, ತಾಪಮಾನ, ಆಕ್ಸಿಜನ್ ಮಟ್ಟ, ರಕ್ತದಲ್ಲಿನ ಸಕ್ಕರೆ ಮಟ್ಟ, ಮೂತ್ರಪಿಂಡ ಮತ್ತು ಪಿತ್ತಜನಕಾಂಗದ ಕಾರ್ಯ ಪರೀಕ್ಷೆಗಳು, ಸಿಬಿಸಿ, ಇಸಿಜಿ, ಇತ್ಯಾದಿಗಳನ್ನು ಪರಿಶೀಲಿಸಲಾಗುತ್ತದೆ. ನಿಮ್ಮ ಫಲಿತಾಂಶಗಳನ್ನು ಅವಲಂಬಿಸಿ, ಹೆಚ್ಚು ಸಮಗ್ರ ಚಿಕಿತ್ಸೆಗಾಗಿ ನಿಮ್ಮನ್ನು ಗೊತ್ತುಪಡಿಸಿದ ಕೋವಿಡ್ ಆಸ್ಪತ್ರೆಗಳಿಗೆ (ಡಿಸಿಎಚ್) ಕಳುಹಿಸಬಹುದು.

  • ತೀವ್ರ ಪ್ರಕರಣಗಳು

ನಿಮ್ಮ ಆಕ್ಸಿಜನ್ ಮಟ್ಟವು 90% ಕ್ಕಿಂತ ಕಡಿಮೆಯಿದ್ದರೆ, ನಿಮ್ಮನ್ನು ನೇರವಾಗಿ ಡಿಸಿಎಚ್ ಗೆ ಕಳುಹಿಸಲಾಗುತ್ತದೆ. ನೀವು 60 ವರ್ಷಕ್ಕಿಂತ ಮೇಲ್ಪಟ್ಟವರಾಗಿದ್ದು, ನಿಮಗೆ ಸಹ-ಕಾಯಿಲೆಗಳಿದ್ದರೆ ಅಥವಾ ದೇಹದ ಇಮ್ಯುನಿಟಿ ಕಡಿಮೆ ಇದ್ದರೆ, ಅದೇ ಅನ್ವಯಿಸುತ್ತದೆ. ಸಿಸಿಸಿ ಅಥವಾ ಡಿಸಿಎಚ್‌ಸಿಯಲ್ಲಿ ಅಸ್ವಸ್ಥರ ಆರೋಗ್ಯವು ಹದಗೆಟ್ಟರೆ, ಅವರನ್ನೂ ಡಿಸಿಎಚ್ ಗೆ ಕಳುಹಿಸಲಾಗುತ್ತದೆ.

  • ಅಸ್ವಸ್ಥರನ್ನು ಸ್ಥಳಾಂತರಿಸಲು ಆರೋಗ್ಯ ಕವಚ ಆಂಬ್ಯುಲೆನ್ಸ್‌ಗಾಗಿ 108 ಡಯಲ್ ಮಾಡಿ
  • ಸರ್ಕಾರಿ ಅಥವಾ ಖಾಸಗಿ ಆಸ್ಪತ್ರೆ ಹಾಸಿಗೆಯನ್ನು ನಿರಾಕರಿಸಿದರೆ 1912 ಡಯಲ್ ಮಾಡಿ

108 ಸೇವೆಯು ವ್ಯಕ್ತಿಗೆ ಕೋವಿಡ್ ಧೃಡವೇ ಅಥವಾ ಶಂಕಿತ ಪ್ರಕರಣವಾಗಿದೆಯೆ ಎಂದು ಖಚಿತಪಡಿಸಿ, ಬಿಬಿಎಂಪಿಯ ಹಾಸಿಗೆ ಹಂಚಿಕೆ ತಂಡದೊಂದಿಗೆ ಸಮಾಲೋಚಿಸಿ ಹತ್ತಿರದ ಚಿಕಿತ್ಸಾ ಸೌಲಭ್ಯಕ್ಕೆ ಅಡ್ವಾನ್ಸ್ಡ್ ಲೈಫ್ ಸಪೋರ್ಟ್ (ALS) ಆಂಬ್ಯುಲೆನ್ಸ್ ವ್ಯವಸ್ಥೆ ಮಾಡುತ್ತದೆ.

ವ್ಯಕ್ತಿಯು ಕೋವಿಡ್-19 ಪರೀಕ್ಷೆಗೆ ಒಳಗಾಗದಿದ್ದರೆ, ಆದರೆ ಉಸಿರಾಟ, ಆಸ್ತಮಾ ಅಥವಾ ಐಎಲ್ಐ ಹೊಂದಿದ್ದರೆ, ಅವರನ್ನು ತಕ್ಷಣ ಕೋವಿಡ್ ಆಸ್ಪತ್ರೆಗೆ ಸ್ಥಳಾಂತರಿಸಿ, ಕಡ್ಡಾಯವಾಗಿ ಪರೀಕ್ಷಿಸಲಾಗುತ್ತದೆ.

5. ಬಿಡುಗಡೆ (ಡಿಸ್ಚಾರ್ಜ್)

ಚಿಕಿತ್ಸೆಯ ನಂತರ, ಅಸ್ವಸ್ಥರು ಕೆಲವು ಮಾನದಂಡಗಳನ್ನು ಪೂರೈಸಿದರೆ ಮಾತ್ರ ಅವರನ್ನು ಬಿಡುಗಡೆ ಮಾಡಬಹುದು. ಬಿಡುಗಡೆಯಾದ ಎಲ್ಲಾ ಅಸ್ವಸ್ಥರು ಮನೆಯಲ್ಲಿ ಕ್ವಾರಂಟೈನ್ ಸ್ವಯಂ-ಮೇಲ್ವಿಚಾರಣೆಯ 14 ದಿನಗಳನ್ನು ಪಾಲಿಸಬೇಕು.

ವಿವಿಧ ವರ್ಗದ ಅಸ್ವಸ್ಥರಿಗೆ ಬಿಡುಗಡೆ ಮಾನದಂಡಗಳು ಕೆಳಕಂಡಂತಿವೆ:

ಲಕ್ಷಣರಹಿತ

  • ಯಾವುದೇ ಲಕ್ಷಣಗಳಿಲ್ಲ
  • ಜ್ವರ ಇಲ್ಲ
  • ಮುಂದುವರಿದ 95% ಕ್ಕಿಂತ ಹೆಚ್ಚು ಆಕ್ಸಿಜನ್ ಮಟ್ಟ
  • ಉಸಿರಾಟದ ಪ್ರಮಾಣ ನಿಮಿಷಕ್ಕೆ 24 ಕ್ಕಿಂತ ಕಡಿಮೆ
  • ಪರೀಕ್ಷೆಯ 10 ದಿನಗಳ ನಂತರ ಅಸ್ವಸ್ಥರು ಲಕ್ಷಣರಹಿತ

ಕಡಿಮೆ / ಮಧ್ಯಮ ಲಕ್ಷಣಗಳು

  • ಸತತ ಮೂರು ದಿನಗಳವರೆಗೆ ಜ್ವರ ಅಥವಾ ಲಕ್ಷಣಗಳಿಲ್ಲ
  • ನಾಲ್ಕು ದಿನಗಳವರೆಗೆ 95% ಆಕ್ಸಿಜನ್ ಮಟ್ಟ
  • ಉಸಿರಾಟದ ತೊಂದರೆ ಮತ್ತು ಉರಿಯೂತದ (inflammation) ಗುರುತುಗಳ ಸುಧಾರಣೆ 
  • ರೋಗಲಕ್ಷಣ ಕಂಡುಹಿಡಿದ ನಂತರ ಕನಿಷ್ಠ 10 ದಿನಗಳವರೆಗೆ ಮೇಲಿನ ಪರಿಸ್ಥಿತಿಗಳ ನಿರ್ವಹಣೆ 

ತೀವ್ರ ಲಕ್ಷಣಗಳು

  • ಮೂರು ದಿನಗಳವರೆಗೆ ಜ್ವರ ಅಥವಾ ಲಕ್ಷಣಗಳಿಲ್ಲ
  • ನಾಲ್ಕು ದಿನಗಳವರೆಗೆ 95% ರಷ್ಟು ಆಕ್ಸಿಜನ್
  • ಉಸಿರಾಟದ ತೊಂದರೆ ಮತ್ತು ಉರಿಯೂತದ ಗುರುತುಗಳ ಸುಧಾರಣೆ 
  • ಸಂಪೂರ್ಣ ವೈದ್ಯಕೀಯ ಚೇತರಿಕೆ
  • ಚೇತರಿಕೆಯ ಮೂರು ದಿನಗಳ ನಂತರ ಪರೀಕ್ಷೆ ನೆಗೆಟಿವ್ ಬರತಕ್ಕದ್ದು

Read the original in English here.

About our volunteer translator

Madhusudhan Rao is a long-time resident of South Bengaluru. He works in the IT sector but dabbles in other passions from time to time, mainly centred around volunteering, teaching and language.

Also read
► Eight things you must know about insurance policies covering COVID-19 treatment
► What to expect and how to cope if you test COVID positive in Delhi

Comments:

  1. SP says:

    Hi.. I will visit my family on 1st August by flight and taking them back home on 7th August by Car..What to do?Do I need to go institutional or home quarantine?

Leave a Reply

Your email address will not be published. Required fields are marked *

This site uses Akismet to reduce spam. Learn how your comment data is processed.

Similar Story

Newborn screening: Why it is needed and what we must know

Newborns and their parents can benefit from a government-sponsored newborn screening programme in Chennai and across Tamil Nadu.

A national newborn screening programme, as part of the health policy, is not yet a reality in India, even though such an initiative can help in the early detection of metabolic and genetic disorders. A universal screening programme initiated by the government can go a long way in the prevention of life-threatening illnesses in children, especially in this country, where the incidence of prematurity and low birth weight is quite high. However, newborn screening is available in many private hospitals and it is important for parents to be aware and ask for these tests for their newborn. To mark International…

Similar Story

Delhi heat impact: Heat wave hits earnings, health of auto rickshaw drivers

This summer broke all temperature records, but heat affects those working outside, such as autorickshaw drivers in Delhi, much more.

As heat wave conditions prevail in Delhi and parts of north India, authorities have advised citizens to stay indoors or in the shade during the mid-day hours when the sun is the strongest and avoid strenuous activity from noon to 4 p.m., to protect themselves from heat stress-related illnesses. However, avoiding the summer heat is simply not an option for the auto drivers of Delhi as they need to continue working under these extreme conditions due to financial necessity. Their earnings are already facing a hit as fewer people are either stepping out or taking autos because of the heat.…